Saturday, 27th April 2024
 
Advertise With Us | Contact Us

ಸರ್ಕಾರಿ ಹಾಗೂ ಅನುದಾನಿತ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಹಾಗೂ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಪಡೆದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ : ಟಿ.ಬಿ. ಜಯಚಂದ್ರ

ಬೆಂಗಳೂರು, ಜುಲೈ 19 ( ಕರ್ನಾಟಕ ವಾರ್ತೆ):
ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಹಾಗೂ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಪಡೆದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎರಡೂವರೆ ಲಕ್ಷ ರೂ ಗಳಿಗೂ ಕಡಿಮೆ ವಾರ್ಷಿಕ ಕೌಟುಂಬಿಕ ಆದಾಯವಿರುವ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‍ಟಾಪ್ ವಿತರಿಸಲು ರಾಜ್ಯ ಸಚಿವ ಸಂಪುಟವು ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಿದರು.

ಸುಮಾರು 300 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸಲಿರುವ ಈ ಯೋಜನೆ ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಬರದ ಮೇಲೆ ಬರೆ ! ಬದಲಾದ ಕೇಂದ್ರದ ಮಾರ್ಗಸೂಚಿ, ಮರು ಪರಿಶೀಲನೆಗೆ ಮನವಿ ಸಲ್ಲಿಸಲು ನಿರ್ಧಾರ
ಬರ ಪೀಡಿತ ಪ್ರದೇಶ ಎಂದು ಘೋಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ರಾಜ್ಯ ಸಚಿವ ಸಂಪುಟವು ಸುದೀರ್ಘವಾಗಿ ಚರ್ಚಿಸಿತು.

ಈ ಹಿಂದೆ ಸತತವಾಗಿ ನಾಲ್ಕು ವಾರಗಳ ಕಾಲ ಮಳೆ ಇಲ್ಲದೆ ಒಣ ಹವೆ ಇದ್ದಲ್ಲಿ ಬರ ಪೀಡಿತ ಪ್ರದೇಶ ಎಂದು ಘೋಷಿಸಬಹುದಾಗಿತ್ತು. ಆದರೆ, ಶೇಕಡಾ 50 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರಬೇಕು ಹಾಗೂ ಅಂತರ್ಜಲದ ಪ್ರಮಾಣದಲ್ಲಿನ ಕುಸಿತವನ್ನೂ ಗಮನದಲ್ಲಿಸಿಕೊಂಡು ಬರಪೀಡಿತ ಪ್ರದೇಶವನ್ನು ಘೋಷಿಸಲು ನಿರ್ಧರಿಸುವ ಬದಲಾದ ಮಾರ್ಗಸೂಚಿಗಳನ್ನು ಅವಲೋಕಿಸಿದಾಗ ಕೇಂದ್ರ ಸರ್ಕಾರವು ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಯತ್ನಿಸುತ್ತಿದೆ ಎಂಬ ಅಭಿಪ್ರಾಯ ಹೊರಹೊಮ್ಮಿದೆ.

ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ರಾಜ್ಯದ 176 ತಾಲ್ಲುಕುಗಳಲ್ಲಿ 160 ತಾಲ್ಲುಕುಗಳು ಬರಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಬದಲಾದ ಮಾರ್ಗಸೂಚಿಯ ನೂತನ ಮಾನದಂಡಗಳನ್ನು ಅನ್ವಯಿಸಿದರೆ, ಬರಪೀಡಿತ ಎಂದು ಘೋಷಿಸಲು 38 ತಾಲ್ಲುಕುಗಳು ಮಾತ್ರ ಅರ್ಹತೆ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೇಲೆ ಉಂಟಾಗುವ ಪರಿಣಾಮದ ಸಮಗ್ರ ಚಿತ್ರಣವನ್ನು ವಿವರಿಸಿ ಬದಲಾವಣೆ ಮಾಡಿರುವ ಮಾರ್ಗಸೂಚಿಗಳ ಮರು-ಪರಿಶೀಲನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಪುಟ ನಿರ್ಧರಿಸಿತು ಎಂದು ಜಯಚಂದ್ರ ಅವರು ವಿವರಿಸಿದರು.

ಎಲ್ಲೆಲ್ಲೂ ಮಳೆ ಕೊರತೆ
ಜೂನ್ ಮತ್ತು ಜುಲೈ ತಿಂಗಳಲ್ಲಿ ಮಲೆನಾಡು ಪ್ರದೇಶವನ್ನೂ ಒಳಗೊಂಡಂತೆ ರಾಜ್ಯದ ಎಲ್ಲೆಡೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿ, ಮಳೆ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ. ಕರಾವಳಿ, ಕೊಡಗು ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವುದು ನೆಮ್ಮದಿ ತಂದಿದೆ. ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದ್ದ ಗೋಶಾಲೆಗಳು ಸಧ್ಯಕ್ಕೆ ಸ್ಥಗಿತಗೊಂಡಿದೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಗೋಶಾಲೆಗಳು ನಡೆಯುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರು ನೀರಾವರಿ ಪಂಪ್ ಸೆಟ್‍ಗಳ ನೆರವಿನಿಂದ ಮೇವು ಉತ್ಪಾದಿಸಲು ಕ್ಷಿಪ್ರವಾಗಿ ಬೆಳೆಯುವ ಬೀಜಗಳನ್ನು ವಿತರಿಸಲಾಗಿದೆ ಎಂದರು.

ಗಾಳಿ ಅನುಹುತಕ್ಕೂ ಪರಿಹಾರದ ಬೇಡಿಕೆ
ಇತ್ತೀಚೆಗೆ ಆಶಾಢದ ಗಾಳಿಯಿಂದ ಉಂಟಾಗಿರುವ ಅನುಹುತಕ್ಕೂ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಪುಟ ತೀರ್ಮಾನಿಸಿದೆ. ತೆಂಗು ಇಳುವರಿಯಲ್ಲಿ ಶೇಕಡಾ 33 ರಷ್ಟು ಅಂದರೆ 1,20, 755 ಹೆಕ್ಟೇರ್ ಹಾಗೂ ಅಡಿಕೆ ಇಳುವರಿಯಲ್ಲಿ ಶೇಕಡಾ 31 ರಷ್ಟು ಅಂದರೆ 39,170 ಹೆಕ್ಟೇರ್ ನಷ್ಟ ಉಂಟಾಗಿದೆ ಎಂದು ರಾಜ್ಯದ ರಾಜಧಾನಿಗೆ ತಲುಪಿರುವ ಮೊದಲ ಮಾಹಿತಿಯಾಗಿದೆ ಎಂದು ಜಯಚಂದ್ರ ಅವರು ಹೇಳಿದರು.

ಸುಧಾರಿತ ತಾಂತ್ರಿಕತೆ ಅಳವಡಿಸಿಕೊಂಡು ಬೇಸಾಯ ಮಾಡುವ ರೈತರ ಖಾತೆಗಳಿಗೆ ಪ್ರೋತ್ಸಾಹ ಧನ ನೇರ ಜಮೆ
ಆಯವ್ಯಯದಲ್ಲಿ ಘೋಷಿಸಿದಂತೆ ಸುಧಾರಿತ ತಾಂತ್ರಿಕತೆ ಅಳವಡಿಸಿಕೊಂಡು ಬೇಸಾಯ ಮಾಡುವ ರೈತ ಸಮುದಾಯಗಳಿಗೆ 130.23 ಕೋಟಿ ರೂ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಕೃಷಿಗೆ ಪೂರಕವಾಗಿ ಯಾಂತ್ರಿಕ ಬಿತ್ತನೆ, ನೀರು ಉಳಿಸುವಿಕೆ, ಅಂತರ್ಬೆಳೆಯಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ರೈತ ಸಮುದಾಯದಲ್ಲಿ ಪ್ರೋತ್ಸಾಹಿಸಿ, ಕೃಷಿಕರಲ್ಲಿ ಆರೋಗ್ಯಕರ ಸ್ಪರ್ಧೆಗೆ ಅವಕಾಶ ಮತ್ತು ವೇದಿಕೆ ಕಲ್ಪಿಸಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಅಗತ್ಯವಾದ ಪ್ರೋತ್ಸಾಹ ನೀಡುವ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಗ್ರಾಮೀಣ ರಸ್ತೆ ನಿರ್ವಹಣೆಗೆ ಹೊಸ ನೀತಿ
ಈಶ್ವರ ಖಂಡ್ರೆ ವರದಿಯ ಶಿಫಾರಸ್ಸುಗಳನ್ನು ಆಧರಿಸಿ ರಾಜ್ಯದ ಎಲ್ಲಾ ಗ್ರಾಮೀಣ ರಸ್ತೆಗಳ ನಿರ್ವಹಣೆ ಕುರಿತಂತೆ ಹೊಸ ನೀತಿ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದರಲ್ಲಿ 66,374 ಕಿ ಮೀ ಡಾಂಬರು ರಸ್ತೆಗಳು, 23,059 ಕಿ ಮೀ ಜಲ್ಲಿ ರಸ್ತೆಗಳು, 25,567 ಕಿ ಮೀ ಗ್ರಾವೆಲ್ ರಸ್ತೆಗಳು ಹಾಗೂ 65,542 ಕಿ ಮೀ ಮಣ್ಣಿನ ರಸ್ತೆಗಳನ್ನು ಒಳಗೊಂಡಂತೆ 1,80,542 ಕಿ ಮೀ ರಸ್ತೆಗಳನ್ನು ಜನ ಹಾಗೂ ಸಂಚಾರ ಸಾಂದ್ರತೆಯನ್ನು ಆಧರಿಸಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದವರು ಐದು ವರ್ಷಗಳ ಅವಧಿಗೆ ಅದರ ನಿರ್ವಹಣೆ ಮಾಡುವ ಕರಡು ನೀತಿಗೆ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದ 146 ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ
ರಾಜ್ಯದಲ್ಲಿರುವ 146 ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಮೂರು-ಹಾಸಿಗೆಗಳ ಸಾಮಥ್ರ್ಯದ ವೆಂಟಿಲೇಟರ್ ಸೌಲಭ್ಯವಿರುವ ತೀವ್ರ ನಿಗಾ ಘಟಕಗಳನ್ನು ಪ್ರಾರಂಭಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದಕ್ಕೆ ಅಗತ್ಯವಿರುವ 45.48 ಕೋಟಿ ರೂ ವೆಚ್ಚವನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 15 ಲಕ್ಷ ರೂ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಐದು ಲಕ್ಷ ರೂ ಪಡೆದುವೈದ್ಯಕೀಯ ಉಪಕರಣಗಳು ಹಾಗೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪುಟವು ಸಮ್ಮತಿಸಿದೆ.

ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಸಾಲ ಪಡೆಯಲು ಪ್ರತಿ ಖಾತರಿ
ರಾಜ್ಯದ ಕೈಮಗ್ಗ ಅಭಿವೃದ್ಧಿ ನಿಗಮವು ಒಕ್ಕೂಟ ಬ್ಯಾಂಕ್‍ಗಳಿಂದ ಏಪ್ರಿಲ್ 1, 2017 ರಿಂದ ಮಾರ್ಚ್ 31, 2018 ರ ವರೆಗೆ ಒಂದು ವರ್ಷಗಳ ಅವಧಿಗೆ ಪಡೆಯುವ 27 ಕೋಟಿ ರೂ ಸಾಲಕ್ಕೆ ರಾಜ್ಯ ಸರ್ಕಾರ ಪ್ರತಿ ಖಾತರಿ ನೀಡಲು ಸಂಪುಟ ಅನುಮೋದನೆ ನೀಡಿದೆ.

ನಿರ್ಮಲ ಮತ್ತು ಸ್ಪೂರ್ತಿ ಕಿಟ್ ಖರೀದಿಸಲು ಒಪ್ಪಿಗೆ
ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ವಸತಿ ಶಾಲೆ ಮತ್ತು ಪದವಿಪೂರ್ವ ಶಾಲೆಗಳ ವಿದ್ಯಾರ್ಥಿ ನಿಲಯಗಳಿಗೆ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಿಂದ 15.70 ಕೋಟಿ ರೂ ವೆಚ್ಚದಲ್ಲಿ ನಿರ್ಮಲ ಮತ್ತು ಸ್ಪೂರ್ತಿ ಕಿಟ್ ಖರೀದಿಸಲು ಸಂಪುಟವು ಒಪ್ಪಿಗೆ ನೀಡಿದೆ. ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಿರುವ 220 ವಸತಿ ಶಾಲೆಗಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಒಳಗೊಂಡಂತೆ 1.25 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಲಾಭವಾಗಲಿದೆ. ಸಮವಸ್ತ್ರ, ಪಠ್ಯ ಪುಸ್ತಕಗಳ ಜೊತೆಗೆ ಈ ಯೋಜನೆಯಡಿ ಕೊಬ್ಬರಿ ಎಣ್ಣೆ, ಸಾಬೂನು, ಟೂತ್ ಪೇಸ್ಟ್ ಒದಗಿಸಲಾಗುತ್ತದೆ.

ಪ್ರವಾಸೋದ್ಯಮ ಉತ್ತೇಜನಕ್ಕೆ ಮೆಟ್ರೋದೊಂದಿಗೆ ಒಪ್ಪಂದ
ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮುಂದಿನ ಐದು ವರ್ಷಗಳ ಅವಧಿಗೆ ಒಟ್ಟಾರೆ 37.88 ಕೋಟಿ ರೂ ಹಾಗೂ ಇತರ ತೆರಿಗೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿದಿನವೂ ಎರಡು ಲಕ್ಷಕ್ಕೂ ಹೆಚ್ಚು ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪ್ರೇಕ್ಷಣಿಯ ತಾಣಗಳ ಆಕರ್ಷಕ ಚಿತ್ರಗಳನ್ನು ಪ್ರದರ್ಶಿಸಲು ಈ ಒಡಂಬಡಿಕೆ ಅವಕಾಶ ಕಲ್ಪಿಸಲಿದೆ.

ಒಳಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಅನುಮೋದನೆ
ಬೆಂಗಳೂರಿನ ಹೆಸರುಘಟ್ಟಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗಳಿಗೆ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ 37.28 ಕೋಟಿ ರೂ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ಕೈಗಾರಿಕಾ ತ್ಯಾಜ್ಯಗಳ ಸಂಸ್ಕರಣೆಗೆ ಅನುಕೂಲವಾಗಲಿದೆ ಎಂದು ಜಯಚಂದ್ರ ಅವರು ಮಾಹಿತಿ ನೀಡಿದರು.

ಭೂ ಬ್ಯಾಂಕ್ ಸ್ಥಾಪನೆಗೆ ಒಪ್ಪಿಗೆ
ಕಂದಾಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತಿತರ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಭೂಸ್ವಾಧೀನ ಮಾಡಿಕೊಳ್ಳಲು ಹಾಗೂ ಭೂ ಬ್ಯಾಂಕ್ ಸ್ಥಾಪಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಕಂದಾಯ, ನಗಾಭಿವೃದ್ಧಿ ಇಲಾಖೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂಎರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಬೆಂಗಳೂರು ಮಹಾನಗರದ ಮೂಲ ಸೌಲಭ್ಯ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಮಂತ್ರಾಲಯಕ್ಕೆ ಸೇರಿದ ಜಮೀನನ್ನು ವಿನಿಮಯದ ಮೂಲಕ ಪಡೆದು ಕೊಳ್ಳಲು ಹಾಗೂ ಸರ್ಕಾರದ ಸ್ವಾಧೀನದಲ್ಲಿರುವ ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲು ಈ ಸಮಿತಿ ಅಧಿಕಾರ ಹೊಂದಿರುವುದರಿಂದ ನಗರದಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಂಬಂಧಿತ ಕಾಮಗಾರಿಗಳನ್ನು ಕ್ಷಿಪ್ರವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ಮಂಜೂರು
ಬೆಂಗಳೂರು ನಗರದ ಅರ್ಕಾವತಿ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಒಳಪಟ್ಟಿರುವ 197.09 ಎಕರೆ ಸರ್ಕಾರಿ ಕೆರೆ, ಕೆರೆ ಅಂಗಳ ಮತ್ತು ಕೆರೆ-ಕಟ್ಟೆಯಂತಹ ಎಲ್ಲಾ ಜಲಕಾಯಗಳ ಜಮೀನನ್ನು ಹಾಗೂ 182.13 ಎಕರೆ ಗೋಮಾಳ ಜಮೀನನ್ನು ಒಟ್ಟಾರೆ 379.22 ಎಕರೆ ಪ್ರದೇಶವನ್ನು ಸಾರ್ವಜನಿಕ ಸೊತ್ತಾಗಿ ಸಂರಕ್ಷಣೆ ಹಾಗೂ ನಿರ್ವಹಣೆ ಮಾಡಬೇಕು ಎಂಬ ಪೂರ್ವ ಒಪ್ಪಂದದ ಷರತ್ತಿನ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡಲು ಸಂಪುಟ ನಿರ್ಧರಿಸಿದೆ.

ಕರ್ನಾಟಕ ಅನಿಮೇಷನ್, ವಿಷುವಲ್ ಎಫೆಕ್ಟ್ಸ್ ಗೇಮಿಂಗ್ ಅಂಡ್ ಕಾಮಿಕ್ಸ್ ಪಾಲಿಸಿ
ರಾಜ್ಯ ಆಯವ್ಯಯದಲ್ಲಿ ಘೋಷಿಸಿದಂತೆ ಕರ್ನಾಟಕ ಅನಿಮೇಷನ್, ವಿಷುವಲ್ ಎಫೆಕ್ಟ್ಸ್ ಗೇಮಿಂಗ್ ಅಂಡ್ ಕಾಮಿಕ್ಸ್ ಪಾಲಿಸಿ 2017-2022 ರ ಐದು ವರ್ಷಗಳ ಪರಿಷೃತ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯಿಂದ ಬಂಡವಾಳ ಹೂಡಿಕೆಯಲ್ಲಿ ವೃದ್ಧಿ, 20,000 ಕ್ಕೂ ಉದ್ಯೋಗ ಸೃಷ್ಠಿ, ಜಾಗತಿಕ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ, ಕೇವಲ ರಾಜ್ಯದ ರಾಜಧಾನಿ ಮಾತ್ರವಲ್ಲದೆ, ಎರಡನೇ ಹಂತದ ನಗರಗಳಲ್ಲೂ ನವೋದ್ಯಮಗಳ (ಸ್ಟಾರ್ಟ್ ಅಪ್ಸ್) ಪ್ರಾರಂಭವಾಗಿ, ಆದಾಯ ಹಾಗೂ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಲಿದೆ.

ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಉಚಿತ ಜಮೀನು
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ ಐದು ಎಕರೆ ಜಮೀನನ್ನು ನೂತನ ಬಸ್ ಘಟಕ ನಿರ್ಮಾಣಕ್ಕಾಗಿ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಉಚಿತವಾಗಿ ನೀಡಲು ಸಂಪುಟ ನಿರ್ಣಯಿಸಿದೆ.

ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ವ್ಯಾಪ್ತಿಯ ಹತ್ತು ಗ್ರಾಮಗಳ 17 ಕೆರೆಗಳು ಹಾಗೂ ಹೆಚ್ಚುವರಿ 22 ಕೆರೆಗಳಿಗೆ ಕೃಷ್ಣಾ ನದಿಯಿಂದ 0.198 ಟಿ ಎಂ ಸಿ ನೀರನ್ನು 91.40 ಕೋಟಿ ರೂ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ 15 ಎಕರೆ ಜಾಗ ಒದಗಿಸಲು ಸಮ್ಮತಿ
ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನ ಕಸಬಾ ಹೋಬಳಿಯ ಅಮಲಾಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ 15 ಎಕರೆ ಜಾಗವನ್ನು ಉಚಿತವಾಗಿ ಒದಗಿಸಲು ಸಂಪುಟ ಸಮ್ಮತಿಸಿದೆ.

ಬಹುಗ್ರಾಮ ಕುಡಿಯುವ ನೀರು ಯೋಜನೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕುಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಷ್ಠಾನಕ್ಕೆ 762.30 ಕೋಟಿ ರೂ ಪರಿಷ್ಕೃತ ಅಂದಾಜಿಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

ವರ್ಷಾಂತ್ಯದೊಳಗೆ ನರಸಾಪುರಕ್ಕೆ ನೀರು
ಹೆಬ್ಬಾಳದ ದಿನಂಪ್ರತಿ ಮೂರು ದಶಲಕ್ಷ ಲೀಟರ್, ಕೋರಮಂಗಲ-ಚಲ್ಲಘಟ್ಟ ಕಣಿವೆಯ ದಿನಂಪ್ರತಿ 1.5 ದಶಲಕ್ಷ ಲೀಟರ್ ಹಾಗೂ ವೃಷಭಾವತಿ ಕಣಿವೆಯ ದಿನಂಪ್ರತಿ 15 ದಶಲಕ್ಷ ಲೀಟರ್ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಯೋಜನೆಯ ಹತ್ತು ವರ್ಷ ನಿರ್ವಹಣೆಗೆ ಮೂರು ಬಾರಿ ಟೆಂಡರ್ ಆಹ್ವಾನಿಸಿದರೂ ಯಾವುದೇ ಸ್ಪಂದನೆ ಬಂದಿರಲಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿ ಈ ಕಣಿವೆಗಳಿಂದ ನೀರು ಪೂರೈಸುವ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಕಣಿವೆಯ ಸ್ಥಾಪನಾ ವೆಚ್ಚ 334.35 ಕೋಟಿ ರೂ ಹಾಗೂ ನಿರ್ವಹಣಾ ವೆಚ್ಚ 199.96 ಕೋಟಿ ರೂ ಒಳಗೊಂಡಂತೆ 534.31 ಕೋಟಿ ರೂ, ಕೋರಮಂಗಲ-ಚಲ್ಲಘಟ್ಟ ಕಣಿವೆಗೆ 472 ಕೋಟಿ ರೂ ಹಾಗೂ ವೃಷಭಾವತಿ ಕಣಿವೆಗೆ 656.96 ಕೋಟಿ ರೂ ಮೊತ್ತ ಮಂಜೂರು ಮಾಡಿ, ಸಂಪುಟ ಸಮ್ಮತಿಸಿದೆ.

ಅಂತೆಯೇ, ಕೋಲಾರ ಜಿಲ್ಲೆಯ ನರಸಾಪುರಕ್ಕೆ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ವರ್ಷಾಂತ್ಯದೊಳಗೆ ನೀರು ಒದಗಿಸಲಾಗುವುದು ಎಂದು ಜಯಚಂದ್ರ ವಿವರ ನೀಡಿದರು.
ಡಿ ಪಿ ಎಂ

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085