Friday, 26th April 2024
 
Advertise With Us | Contact Us

ದೂರದರ್ಶನ ಸುದ್ದಿ ವಿಭಾಗದ ನಿವೃತ್ತ ನಿರ್ದೇಶಕ ಕೆ.ಎಸ್. ಅಚ್ಯುತನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು, ಅಕ್ಟೋಬರ್ 30 ( ಕರ್ನಾಟಕ ವಾರ್ತೆ):
ಬೆಂಗಳೂರು ದೂರದರ್ಶನ ಸುದ್ದಿ ವಿಭಾಗದ ನಿವೃತ್ತ ನಿರ್ದೇಶಕ ಕೆ ಎಸ್ ಅಚ್ಯುತನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳಲ್ಲಿ ಸರಳ ಕನ್ನಡ ಹಾಗೂ ತಿಳಿಗನ್ನಡದ ಪದಗಳನ್ನು ಬಳಸಿ, ವೀಕ್ಷಕರ ಮನಮುಟ್ಟುವಂತೆ ಸುದ್ದಿಗಳನ್ನು ಪ್ರಸ್ತುತಪಡಿಸಿ, ದೂರದರ್ಶನವನ್ನು ನಾಡಿನ ಜನತೆಗೆ ಸಮೀಪ ದರ್ಶನವನ್ನಾಗಿಸಿದ ಕೀರ್ತಿ ಅಚ್ಯುತನ್ ಅವರಿಗೆ ಸಲ್ಲುತ್ತದೆ. ಸರ್ಕಾರಿ ಮಾಧ್ಯಮದಲ್ಲಿ ಪತ್ರಿದಿನವೂ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ವಿಶೇಷ ಸುದ್ದಿಗಳು ಹಾಗೂ ಲೇಖನಗಳನ್ನು ವಿಮರ್ಶಿಸಿ ವಿಶ್ಲೇಷಣೆ ಮಾಡುವ ಶೃಂಖಲೆಯನ್ನು ಪ್ರಾರಂಭಿಸಿದ ಅಚ್ಯುತನ್ ಅವರು ತಮ್ಮ ಈ ಸಾಹಸದಿಂದ ಎಲ್ಲರ ಗಮನವನ್ನು ಸೆಳೆದಿದ್ದರು. ಪತ್ರಿಕೋದ್ಯಮದಲ್ಲಿ ಅಚ್ಯುತನ್ ಅವರ ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಅನುಕರಣ ಯೋಗ್ಯ. ಹಿರಿಯರು-ಕಿರಿಯರು ಎಂಬ ಬೇಧವಿಲ್ಲದೆ ಎಲ್ಲರೊಡನೆಯೂ ಸ್ನೇಹಜೀವಿಯಾಗಿ ಬೆರೆತು ಸದಾ ಹಸನ್ಮುಖಿಯಾಗಿ ಇರುತ್ತಿದ್ದ ಅಚ್ಯುತನ್ ಅವರು ಸದಾಕಾಲ ನಮ್ಮ ನೆನಪಿನಂಗಳದಲ್ಲಿ ಉಳಿಯುತ್ತಾರೆ ಎಂದು ಸಿದ್ದರಾಮಯ್ಯ ಅವರು ಬಣ್ಣಸಿದ್ದಾರೆ.

ಅಚ್ಯುತನ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅಚ್ಯುತನ್ ಅವರ ಅಗಲಿಕೆಯಿಂದ ಉಂಟಾದ ದುಃಖ ಮತ್ತು ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085