Friday, 19th April 2024
 
Advertise With Us | Contact Us

ತಪ್ಪಿಲ್ಲ ನಿನ್ನೊಳು ಮಂಥರಾ – ಶಿವಕುಮಾರ ಬಿ. ಎ ಅಳಗೋಡು

ಭಾರತ, ರಾಮಾಯಣಗಳು ಕೇವಲ ಕೆಲವೇ ಮುಖ್ಯಭೂಮಿಕೆಗಳ ರಂಜನೆಗೆ ವೇದಿಕೆಯೋಪಾದಿಯಲ್ಲಿ ಕಾಣಿಸಿಕೊಂಡರೂ, ಅಲ್ಲಿನ ಗೌಣಪಾತ್ರಗಳ ಮನೋವಿಶ್ಲೇಷಣೆಗೆ ಹೃದಯರಂಗಸ್ಥಳವನ್ನು ತೆರವುಗೊಳಿಸಿ ಮೆರೆಸುವ ಹಂಬಲ ನನ್ನಲ್ಲುಂಟಾಗಿದೆ. ರಾಮಕೇಂದ್ರಿತವಾದ ವಾಲ್ಮೀಕಿ ರಾಮಾಯಣದಲ್ಲಿ ಮಂಥರೆಯನ್ನು ಕೇವಲ ಒಂದು ಬಗೆಯಲ್ಲಿ ಮಾತ್ರ ಕಾಣಲಾದರೂ, ಅವಳಲ್ಲಿಯೂ ನಿಷ್ಕಪಟ ಮನವಿದೆ ಎಂಬುದನ್ನು ಅರಿಯಬೇಕಾಗಿದೆ.ವಸ್ತುವೊಂದನ್ನು ಒಂದೇ ನೆಲೆಯಿಂದ ನೋಡುವಬದಲು, ಪೂರ್ಣದರ್ಶನದ ಬಳಿಕ ನಿರ್ಣಯ ಕೈಗೊಂಡರೆ ಹೆಚ್ಚು ಪರಿಪೂರ್ಣವೆನಿಸಿಕೊಳ್ಳುತ್ತದೆ.ಅಂಗೈಯಲ್ಲಿ ಆಡುವ ಆಮಲಕವನ್ನು ಕಾಣುವಂತೆ, ಕಜ್ಜಾಯದ ಒಳಗಿನ ಸವಿಯನ್ನು ಅನುಭವಿಸುವಂತೆ ಮಂಥರಾವಲೋಕನ ಮಾಡಲು ಇದೀಗ ಮನಸ್ಸು ತವಕಿಸುತ್ತಿದೆ.

ರಾಮಾಯಣದ ಮಂಥರೆಯು ಮಾಡಿದ ಕಾರ್ಯದಲ್ಲಿ ದೋಷವನ್ನೇ ಆರೋಪಿಸುವ ಬದಲು, ಒಂದಿಷ್ಟು ಗುಣವನ್ನಾಘ್ರಾಣಿಸುವುದು ಒಳ್ಳೆಯದಲ್ಲವೇ?ಈ ನೆಲೆಯಲ್ಲಿಯೇ ಒಮ್ಮೆ ಆಕೆಯ ಒಳಮನವನ್ನು ಮಥಿಸಿದರೆ ಅಲ್ಲಿ ಅನೇಕಾನೇಕ ಅಂಶಗಳು ಮತ್ತೊಂದು ಮುಖದಿಂದ ಕಾಣಿಸಿಕೊಳ್ಳುತ್ತವೆ.ಅವಳಂತರಾಳದಲ್ಲಿ ಮುಗ್ದತೆ, ಅನ್ನವಿಕ್ಕಿದವರ ಮನೆಗೆ ಚಿನ್ನವಿಕ್ಕುವ ಗುಣ ಇಷ್ಟಲ್ಲದೇ ಮತ್ಯಾವ ಸ್ವಾರ್ಥಭಾವವೂ ಇಲ್ಲ. ಉದ್ದೇಶಪೂರ್ವಕವಾಗಿ ಎಸಗುವ ಕಲ್ಮಶಕ್ಕೆ ಮಂಥರೆಯಲ್ಲಿ ಅವಕಾಶವೇ ಇಲ್ಲವಾಗಿತ್ತು.ಅನಾಥ ಮಗುವಾಗಿ ರೋಧಿಸುತ್ತಾ ಅಡವಿಯಲ್ಲಿ ಬಿದ್ದಿರುವ ಹೊತ್ತಿನಲ್ಲಿ ಕೈಕೆಯ ತಂದೆಗೆಸಿಕ್ಕಿ, ಸಲಹಲ್ಪಟ್ಟವಳೀಕೆ.ಹುಟ್ಟಿನಿಂದಲೇ ಇವಳಿಗೆ ಬಳುವಳಿಯಾಗಿ ಬಂದಿದ್ದು ಬೇರೇನೂ ಅಲ್ಲ; ಕೇವಲ ಅಸಹ್ಯ ಹುಟ್ಟಿಸುವ ಅಂಗವಿನ್ಯಾಸ ಮಾತ್ರ. ಇಂಥಹ ಪರಿಸ್ಥಿತಿಯಲ್ಲಿರುವಾಗಲೂ ಕಾಡಿನಿಂದ ಎತ್ತಿಕೊಂಡುಬಂದು ಸಾಕಿ, ಸಲಹಿದವನು ಕೈಕೆಯತಂದೆ. ಮುಂದೆ, ಅರಮನೆವಾಸದ ಭಾಗ್ಯ ದೊರೆತು ಬಹಳ ಕಾಲವಾದರೂ, ಅಲ್ಲಿಯೂ ಇವಳಿಗೆ ಸಿಗಬೇಕಾದ ಆದರಾತಿಥ್ಯ ಸಿಗಲೇ ಇಲ್ಲ. ಕರುಣೆ ತೋರಿಸಬೇಕಾಗಿದ್ದ ಜನರೇ ಮುಖತಿರುಗಿಸುತ್ತಾ, ಅಸಹ್ಯಪಟ್ಟುಕೊಂಡು ಸಾಗುತ್ತಿದ್ದರು. ಒಂದಷ್ಟು ಸಮಯದ ನಂತರ ಆ ನಗರಿಯಲ್ಲಿ ಕೈಕೇಯೂ ಹುಟ್ಟಿಕೊಳ್ಳುತ್ತಾಳೆ.ತರುವಾಯ, ಎಲ್ಲರಿಂದಲೂ ತಿರಸ್ಕøತಳಾಗಿ ಬದುಕುತ್ತಿರುವ ಮಂಥರೆಗೆ, ಮಗಳಂತಿರುವ ಕೈಕೆಯೇ ಪ್ರಪಂಚವಾದಳು.ಅವಳ ಸಂತೋಷವೇ ಸ್ವರ್ಗಸಮಾನಸುಖವಾಗಿ ಕಾಣಿಸುತ್ತದೆ.ಯಾರಿಗೂ ಬೇಡವಾದ ಬಾಗುಬೆನ್ನಿನ ಗುಣವಂತೆ, ಕೈಕೆಗೆ ಮಾತ್ರ ಹೆತ್ತತಾಯಿಗಿಂತಲೂ ಮಿಗಿಲಾದ ಅಕ್ಕರೆಯವಳಾಗುತ್ತಾಳೆ.ಅಮ್ಮನಪ್ರೀತಿಯನ್ನು ಒದಗಿಸುತ್ತಲೇ ಇತರರ ಬಿರುನುಡಿಗಳನ್ನು ನುಂಗಿಬದುಕುತ್ತಾಳೆ.ಜಗವೆಲ್ಲ ಛೀ.., ಥೂ..ಎನ್ನುತ್ತಿದ್ದರೆ, ಯಾವುದರ ಕಡೆಗೂ ಗಮನಹರಿಸದೆಯೇ ಅನ್ನವಿತ್ತ ಒಡೆಯನ ಸುತೆಯ ಸೇವೆಯಲ್ಲಿ ತನ್ನೆಲ್ಲಾ ನೋವುಗಳನ್ನು ಹತ್ತಿಕ್ಕಿಕೊಂಡು ದಿನಕಳೆಯುತ್ತಾಳೆ.

ಪ್ರಾಯಪ್ರಬುದ್ಧಳಾದ ಕೈಕೆಯು ಅಯೋಧ್ಯಾಧಿಪತಿ ದಶರಥಚಕ್ರವರ್ತಿಯ ಮೋಹದ ಮಡದಿಯಾದಾಗ, ದಾಸಿಮಂಥರೆ ಕೂಡ ಅವಳನ್ನು ಅನುಸರಿಸಿ ಸಾಕೇತವನ್ನುಸೇರಿದಳು.ಸ್ಥಳ ಬದಲಾದರೂ ಆಕೆಯ ಕರ್ತವ್ಯನಿಷ್ಟತೆ ಕೊಂಚವೂ ಕಡಿಮೆಯಾಗುವುದಿಲ್ಲ. ಅದೇ ರೀತಿ ಸಹಪರಿಚಾರಕಿಯರು ಅನೇಕ ಮಂದಿ ಇದ್ದರೂ ಕೈಕೆಗೆ ಮಂಥರೆಯೇ ಸರ್ವಸ್ವ. ಮೂರನೇ ಹೆಂಡತಿಯಾಗಿ ಚಂದದವಳು ಬಂದು ಬಹಳ ಕಾಲ ಕಳೆದಿತ್ತು.ಆದರೂ ದಶರಥ ಚಕ್ರವರ್ತಿಗೆ ಸಂತಾನವಾಗಿರಲಿಲ್ಲ. ಅಂತೂ ಕೊನೆಯಲ್ಲಿ ಆತ, ಪುತ್ರಕಾಮೇಷ್ಠಿಯಾಗ ಮಾಡುವ ತನ್ಮೂಲಕ ಮೂವರು ಹೆಂಡಿರಲ್ಲಿ ನಾಲ್ವರು ಮಕ್ಕಳನ್ನು ಪಡೆದುಕೊಳ್ಳುತ್ತಾನೆ.ಅವರಲ್ಲಿ ಹಿರಿಯವನಾದ ರಾಮನೆಂದರೆ ಅಯೋಧ್ಯೆಗೇ ರತ್ನಕಲಶವಿದ್ದಂತೆ.ಕೈಕೆಯೂ ತನ್ನ ಮಗ ಭರತನಿಗಿಂತ, ರಾಮನೆಡೆಗೇ ಹೆಚ್ಚಿನ ಒಲವು ತೋರಿ ಮುದ್ದಿಸುವಳು.ಇಡೀ ಪುರದಲ್ಲಿ ತಳಿರುತೋರಣಗಳು ಶೋಭಿಸಿತು.ಎಷ್ಟೋ ತಾಯಂದಿರು ತಾವು ಹೆತ್ತಮಕ್ಕಳನ್ನೂ ಬಿಟ್ಟು, ಶ್ರೀರಾಮನ ಮುಖದರ್ಶನಕ್ಕಾಗಿ ಓಡೋಡಿ ಬರುತ್ತಿದ್ದರು.ಇವರಂತೆ, ಸಹಜವಾಗಿಯೇ ಹೆಂಗರುಳನ್ನು ಹೊತ್ತ ಮಂಥರೆಗೂ ರಾಮನನ್ನು ಎತ್ತಿ ಆಡಿಸುವ, ಲಾಲಿಪಾಡುವ ಬಯಕೆಯಾಗುತ್ತದೆ.ತನ್ನೊಡಲ ಕಂದನನ್ನು ಅಪ್ಪಿಮುದ್ದಾಡುವ ಯೋಗಭಾಗ್ಯವೇ ಇಲ್ಲದ ಆಕೆಗೆ ದಿನಮಣಿಯಂತೆ ಶೋಭಿಸುವ ರಾಮನನ್ನು ಎತ್ತಿಕೊಳ್ಳಲು ಮನಸಾಗದಿರುವುದೇ? ಆದರೆ, ದೂರದಿಂದಲೇ ಮಂಥರೆಯನ್ನು ಕಂಡಕೂಡಲೆ, ಅವಳನ್ನು ಓಡಿಸುವವರೇ ಅಲ್ಲಿದ್ದರು; ಹೊರತೂ, ಆಕೆಯಲ್ಲಿಯೂ ಅವಿತಿರುವ ಮಧುರಭಾವನೆಗಳ ನರ್ತನಕ್ಕೆ, ತಾಯ್ತನದ ಮಮತೆಯ ಸೂಸುವಿಕೆಗೆ ಯಾರೂ ರಂಗವನ್ನೊದಗಿಸಲಿಲ್ಲ. ಬೇಸರದ ಪೆಚ್ಚುಮುಖ ಹೊತ್ತು ದಿನವೂ ಮಂಥರೆ ರಾಮನೊಡನೆ ಆಡಲಾಗದ ಸ್ಥಿತಿಗೆ ಮರುಗುತ್ತಾ, ನೊಂದುಕೊಂಡು ಮರಳುವಳು. ಪಾಪ! ಇತರರಿಗೆಲ್ಲಿ ತಿಳಿಯುವುದು ಮಂಥರೆಯ ಮಾತೃಹೃದಯದಾಳ?

ಒಂದು ದಿನ ಆಗಸದ ಚಂದ್ರಮನನ್ನು ಕಂಡ ರಾಮ ತನಗದು ಬೇಕೇಬೇಕೆಂದು ಹಠಹಿಡಿಯುತ್ತಾನೆ.ಅವನ ಹಠವನ್ನುನಿಲ್ಲಿಸಲು ಇಡೀ ಸಾಕೇತಪುರವೇ ವಿಫಲವಾಗಿ ಕೈಚೆಲ್ಲಿ ಕೂರುತ್ತದೆ.ದಶರಥನಿಗೆ, ‘ಇಷ್ಟೆಲ್ಲಾ ವಿಸ್ತಾರವಾದ ಭೂಪ್ರದೇಶ ಹೊಂದಿದರೂ; ಮಗನ ಅಳಲನ್ನು ತಡೆಯಲಾಗಲಿಲ್ಲ’ಎಂಬ ಅಸಮಾಧಾನ, ನಾಚಿಕೆ ಎಲ್ಲವೂ ಇಮ್ಮಡಿಯಾಗುತ್ತದೆ.ಆಗ ಓಡಿ ಬಂದು ಪುಟ್ಟಕನ್ನಡಿಯೊಂದರಲ್ಲಿ ಚಂದ್ರಬಿಂಬವನ್ನು ತೋರಿಸಿ ರಾಮನಮುಖದಲ್ಲಿ ಮತ್ತೆ ಮಂದಹಾಸಮೂಡಿಸಿದವರು ಮತ್ತಾರೂ ಅಲ್ಲ; ಎಲ್ಲರಿಂದಲೂ ತಿರಸ್ಕøತಳಾದ ಇದೇ ಮಂಥರಾ! ಯಾರಿಂದಲೂ ರಾಮನನ್ನು ಸಂತೈಸಲಾಗದಿರಲು, ಮಂಥರೆಯ ಮಾತೃಹೃದಯದ ಚತುರತೆ ಅದನ್ನು ಸಾಧ್ಯಗೊಳಿಸಿತು.ಆದರೆ ಈ ಕಟುಸತ್ಯವನ್ನು ಮನಃಪೂರ್ತಿ ಒಪ್ಪಿಕೊಳ್ಳಲು ಆ ಸಾಕೇತಪುರ ಸಿದ್ಧವಿರಲಿಲ್ಲವೆಂಬುದೇ ಚೋದ್ಯದ ಸಂಗತಿ.

ಕಾಲವು ವೇಗವಾಗಿ ಕಳೆಯಲು ದಶರಥನು ಶ್ರೀರಾಮಚಂದ್ರಮನಿಗೆ ಪಟ್ಟಕಟ್ಟಲು ಉದ್ಯುಕ್ತನಾದ. ಆಗ ಈ ಸಂಗತಿಯನ್ನು ತಿಳಿದುಬಂದ ಮಂಥರೆ ತನ್ನೊಡತಿ ಎನಿಸಿದ, ಕರುಳಕುಡಿಮಮತೆಯ ಕೈಕೆಗೆ ಎಲ್ಲವನ್ನೂ ವಿವರಿಸುತ್ತಾಳೆ.ಆದರೆ ಮಂಥರೆಯ ನಿಜಮನವನ್ನರಿಯದ ಕೈಕೆ ಅವಳನ್ನು ‘ನಾಯಿ’ಎಂಬುದಾಗಿ ತುಚ್ಛಭಾವದಿಂದ ಹೀಗಳೆದು ಪುರದಿಂದ ಹೊರಗಟ್ಟುತ್ತಾಳೆ.ನಾನಾಬಗೆಯ ನಿಂದನೆಯ ಚುಚ್ಚುಮಾತುಗಳನ್ನಾಡಿದರೂ ಬೇಸರಗೊಳ್ಳದ ಮಂಥರೆಗೆ ನಾಯಿ ಎಂಬ ತಿರಸ್ಕಾರಭಾವದ ಬೈಗುಳ ಅತೀವವೇದನೆಯನ್ನುಂಟುಮಾಡುತ್ತದೆ.ಆದರೆ, ಆ ಪ್ರಾಣಿಯನ್ನು ಹೀನವೆಂದು ಗುರುತಿಸಿದರೂ,  ನಿಯತ್ತಿಗೆ ಪರ್ಯಾಯಪದ ಅದುವೇ ಅಲ್ಲವೇ? ಇಲ್ಲಿ ನಿಜಾರ್ಥದಲ್ಲಿ ಮಥರೆಯೂ ಅಂತೆಯೇ ಆಗಿದ್ದವಳು.ತನ್ನಲ್ಲಿ ತಿಲದಷ್ಟೂ ಸ್ವಾರ್ಥವನ್ನಿರಿಸಿಕೊಳ್ಳದ ಈಕೆ, ಅನ್ನವಿತ್ತ ದೊರೆಯ ಚಿಗುರನ್ನು ಕಾಯುವ ಕಾಯಕದಲ್ಲಿಯೇ ತನ್ನನ್ನು ಸಂಪೂರ್ಣ ಲೀನಗೊಳಿಸಿಕೊಂಡವಳು.ಕೈಕೆಯ ಮಗನ ಹಿತ ಬಯಸಿದ ಮಂಥರೆಗೆ ಆಕೆಯಿಂದಲೇ ನಾಯಿ ಎಂದು ಕರೆಸಿಕೊಳ್ಳುವ ಹೀನಾಯಸ್ಥಿತಿ ಒದಗುತ್ತದೆ.ಈ ಸಂದರ್ಭದಲ್ಲಿ ಮಂಥರೆಯನ್ನು ‘ಹೊಕ್ಕಳು ಮಾಯಾರಕ್ಕಸಿ’ಎಂಬುದಾಗಿ ಕೆಲವರು ಕರೆದಿದ್ದಾರೆ.ಆದರೆ ನಿಜಸಂಗತಿ ಅದಲ್ಲ, ‘ಅತ್ತಳು ಮಾನಸದಿ ಮಾತೃಹೃದಯಿ’ಎಂಬುದಾಗಿ ತಿಳಿಯುವುದೇ ಸರಿಯಾದುದು ಎಂದು ನನಗನ್ನಿಸುತ್ತದೆ.

ನಿಧಾನವಾಗಿ ಮುಂದೆ ಮಂಥರೆ ತನ್ನ ನಿಸ್ವಾರ್ಥಸೇವೆಯ ಕುರಿತಾಗಿ ಕೈಕೆಗೆ ಹೇಳಿದಾಗ ಅವಳಿಗೂ ಅದು ಹೌದೆನಿಸುತ್ತದೆ.ನಾವಿಲ್ಲಿ ಗಮನಿಸಬೇಕಾದ ಅಂಶ ಪ್ರಧಾನವಾದುದೊಂದಿದೆ.ಮಂಥರೆಗೆ ರಾಮ ರಾಜನಾದರೂ ಸಿಗುವ ಘನತೆ ಅಷ್ಟೇ, ಭರತನಾದರೂ ಸಿಗುವುದಷ್ಟೇ.ಯಾರೇ ಅರಸರಾದರೂ ಸೇವೆಮಾಡುವವರು ಪ್ರಜೆಗಳೇ ಹೊರತು ಅನ್ಯರಲ್ಲ!! ತಂದೆತಾಯಿಯರ ಪ್ರೀತಿಯನ್ನೇ ಪಡೆಯದ ಅನಾಥೆ
ಮಂಥರೆಗೆ ಆಶ್ರಯ ನೀಡಿ ಮರುಜನ್ಮ ನೀಡಿದವನು ಕೈಕೆಯ ತಂದೆ.ಆ ಋಣ ತೀರಿಸುವ ಒಂದೇ ಹೆಬ್ಬಯಕೆ ಅವಳದ್ದು.ಅದರಲ್ಲಿ ಕುಹಕವಿಲ್ಲ; ಸ್ವಾರ್ಥವಿಲ್ಲ. ಅನ್ನವಿತ್ತ ದೊರೆಯ ವಂಶದ ಹಿತವೇ ಆಕೆಗೆ ಪ್ರಧಾನವೇ ಹೊರತೂ ಮತ್ತೊಂದಲ್ಲ. ಅದಕ್ಕಾಗಿ ಅವಳು ಭರತನಿಗೆ ಪಟ್ಟವನ್ನಪೇಕ್ಷಿಸಿದರೆ ಅದರಲ್ಲಿ ತಪ್ಪೇನಿದೆ?

ಅಂತೂ ಮಂಥರೆಯ ಬಯಕೆಯಂತೆಯೇ ರಾಮ ವನಗಮನ ಮಾಡಲು ಸಿದ್ಧನಾಗುತ್ತಾನೆ.ಒಂದೆಡೆಯಲ್ಲಿ ದಶರಥ ನಿತ್ರಾಣಗೊಂಡು ಕುಸಿಯುತ್ತಾನೆ.ಇಡೀ ಅಯೋಧ್ಯಾಪಟ್ಟಣವೇ ಸ್ಮಶಾನಮೌನ ತಾಳುತ್ತದೆ.ಯಾರೇ ಬೇಡಿದರೂ ರಾಮನ ಅಚಲಮನ ವನಗಮನವನ್ನಲ್ಲದೆ, ಅನ್ಯಸಂಗತಿಯ ಕಡೆಗೆ ಸಾಗುವುದಿಲ್ಲ. ಅಂತಿಮವಾಗಿ ರಾಮನನ್ನು ಒಡಗೂಡಿ ಸೀತೆ, ಲಕ್ಷ್ಮಣ ನಾರುಮಡಿಯುಟ್ಟು ತೆರಳುತ್ತಾರೆ.ಘಟಿಸಿದ ಪ್ರಕರಣಗಳನ್ನು ತಿಳಿದೊಡನೆಯೇ ಭರತ ಅಯೋಧ್ಯೆಯ ಕಡೆಗೆ ಧಾವಿಸಿ ಬರುತ್ತಾನೆ.ಭರತನ ಸಂತೋಷವನ್ನೇ ಕಾಣಬೇಕೆಂದು ರಾಮನನ್ನು ಹುಡುಕಿಕೊಂಡು ಹೊರಟ ಮಂಥರೆ ಕಾಡಿನಲ್ಲಿ ಹೊತ್ತಿಕೊಂಡ ಕಾಡ್ಗಿಚ್ಚನ್ನೇ ರಾಮನೆಂದು ಭಾವಿಸಿ ಮುಂದೆ ಮುಂದೆ ಸಾಗಿ ಅರಣ್ಯದಲ್ಲಿಯೇ ಮರೆಯಾಗಿ ಹೋದಳು.ಜಗವರಿಯದ ಮಾತೃಹೃದಯಿ ಉರಿಯೊಡನೆ ಕರಗಿಹೋದಳು! ಬಾಳಿನುದ್ದಕ್ಕೂ ತನಗಾಗಿ ಆಕೆ ಏನನ್ನೂ ಅಪೇಕ್ಷಿಸಲಿಲ್ಲ. ಎಲ್ಲಾ ಸಂದರ್ಭದಲ್ಲಿಯೂ ಕೈಕೆ, ಭರತನ ಹಿತಕ್ಕಾಗಿಯೇ ಶ್ರಮಿಸಿದಳು.ಕೊನೆಯಲ್ಲಿಯೂ ಅಯೋಧ್ಯೆಯಲ್ಲಿ ತನ್ನಿಂದಾಗಿ ಕದಡಿದ ಶಾಂತಿಯನ್ನು ಪುನರ್‍ಸ್ಥಾಪಿಸುವ ಅಭಿಲಾಷೆ ಹೊತ್ತು ಸಾಗಿದಳು.ಮುಂದೊಂದು ದಿನ ಮತ್ತೆ ಅವಳ ಮಹದಾಸೆ ಈಡೇರುತ್ತದೆ.ಆದರೆ, ಅವಳಾಗಲೇ ಅನಲನೊಡನೆ ಕಾಲನರಮನೆಯ ಅತಿಥಿಯಾಗಿ ಬಿಟ್ಟಿರುತ್ತಾಳೆ…..*

-ಶಿವಕುಮಾರ ಬಿ. ಎ ಅಳಗೋಡು

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085