Tuesday, 16th April 2024
 
Advertise With Us | Contact Us

ಪ್ರತಿಭಾವಂತ ಸುದ್ದಿ ಛಾಯಾಗ್ರಾಹಕ ಕೇಶವ ವಿಟ್ಲ ಅವರ ನಿಧನಕ್ಕೆ ಮುಖ್ಯಮಂತ್ರಿ ಶೋಕ

ಬೆಂಗಳೂರು, ಮೇ 28 ( ಕರ್ನಾಟಕ ವಾರ್ತೆ ):
ಪ್ರತಿಭಾವಂತ ಸುದ್ದಿ ಛಾಯಾಗ್ರಾಹಕ ಕೇಶವ ವಿಟ್ಲ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮೂವತ್ತು ವರ್ಷಗಳ ಹಿಂದೆ ಮಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ಮುಂಗಾರು ಕನ್ನಡ ದಿನಪತ್ರಿಕೆಯಲ್ಲಿ ಸುದ್ದಿ ಛಾಯಾಗ್ರಾಹಕರಾಗಿ ವೃತ್ತಿ ಪ್ರಾರಂಭಿಸಿದ ಕೇಶವ ವಿಟ್ಲ ಅವರು ತದ ನಂತರ ಕನ್ನಡ ಪ್ರಭ ಪತ್ರಿಕೆಯಲ್ಲಿ ಜನಮನ್ನಣೆ ಗಳಿಸಿದರು. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಕೇಶವ ವಿಟ್ಲ ಅವರ ವೀಕ್ಷಣ ಛಾಯಾಂಕಣ (Photo Column) ಭಾರತದ ಪತ್ರಿಕೋದ್ಯಮ ಇತಿಹಾಸದಲ್ಲೇ ಒಂದು ನೂತನ ಪರಿಕಲ್ಪನೆ ಹಾಗೂ ವಿನೂತನ ಪ್ರಯೋಗವಾಗಿತ್ತು. ಸಾಮಾಜಿಕ ಸಮಸ್ಯೆಗಳತ್ತ ಬೆಳಕು ಬೀರುತ್ತಿದ್ದ ವೀಕ್ಷಣ ಅಂಕಣದಲ್ಲಿ ಛಾಯಾಚಿತ್ರದ ಜೊತೆ ಒಂದು ವಾಕ್ಯದ ಬರಹ ಪ್ರಕಟಗೊಂಡರೆ ಅದಕ್ಕೆ ಎಲ್ಲೆಡೆ ಸ್ಪಂದನೆ ಹಾಗೂ ಪ್ರಶಂಸೆ ದೊರೆಯುತ್ತಿತ್ತು.

ಕನ್ನಡ ಪ್ರಭದ ನಂತರ ಉದಯವಾಣಿ, ರೂಪತಾರ, ದಿ ಟೆಲಿಗ್ರಾಫ್, ಹಿಂದುಸ್ತಾನ್ ಟೈಮ್ಸ್, ವಾಷಿಂಗ್‍ಟನ್ ಪೋಸ್ಟ್ ಹೀಗೆ ವಿವಿಧ ಪತ್ರಿಕೆಗಳಲ್ಲಿ ಪಯಣಿಸಿದ ಕೇಶವ ವಿಟ್ಲ ಅವರು ಈವರೆಗೆ ನಾಲ್ಕು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ.

ಕೇಶವ ವಿಟ್ಲ ಅವರು 1988 ರಲ್ಲಿ ಏರ್ಪಡಿಸಿದ್ದ ಮೊದಲ ಛಾಯಾಚಿತ್ರ ಪ್ರದರ್ಶನ THE INSIGHTS OF LIFE ಬದುಕಿನ ಒಳನೋಟಗಳನ್ನು ತೋರ್ಪಡಿಸಿದರೆ, 1998 ರ ILLUSION AND REALITY ಛಾಯಾಚಿತ್ರ ಪ್ರದರ್ಶನವು ಲ್ಪನೆ ಮತ್ತು ವಾಸ್ತವಿಕತೆಯ ನಡುವಿನ ಸೋಜಿಗವನ್ನು ಬಿಂಬಿಸಿತ್ತು.

ಅಂತೆಯೇ, 2003 ರಲ್ಲಿ ಶ್ರೀ ಕೇಶವ ವಿಟ್ಲ ಅವರು ಆಯೋಜಿಸಿದ್ದ THE FAITHFUL ಛಾಯಾಚಿತ್ರ ಪ್ರದರ್ಶನವು ರಾಷ್ಟ್ರಾದ್ಯಂತ ಎಲ್ಲಾ ಮಹಾನಗರಗಳಲ್ಲಿನ ಬೀದಿ ನಾಯಿಗಳ ಸ್ಥಿತಿಗತಿಗಳನ್ನು ಪರಿಚಯಿಸಿ ಸಂಚಲನ ಮೂಡಿಸಿದ್ದು ವಿಶೇಷವಾಗಿತ್ತು. ತದ ನಂತರ, 2008 ರಲ್ಲಿ ಆಯೋಜಿಸಿದ್ದ KARNATAKA WATERSCAPES ಪ್ರದರ್ಶನವು ಪ್ರಮುಖ ಕೆರೆಗಳು, ಆಕರ್ಷಕ ಕಡಲ ತೀರಗಳು ಹಾಗೂ ನಯನ ಮನೋಹರ ಜಲಪಾತಗಳು ಹೀಗೆ ರಾಜ್ಯದ ಎಲ್ಲಾ ಜಲಸಿರಿಯ ಕೇಂದ್ರ ಬಿಂದುವಾಗಿತ್ತು.

ಪ್ರಾಣಿ ಪಕ್ಷಿಗಳನ್ನು ಒಳಗೊಂಡಂತೆ ಅರಣ್ಯದ ವೈಶಿಷ್ಠ್ಯ ಹಾಗೂ ವೈವಿಧ್ಯತೆಗಳು, ಬೆಟ್ಟ-ಗುಡ್ಡಗಳು, ಕಲ್ಲು-ಬಂಡೆಗಳು ಮತ್ತು ಶಿಲೆಗಳು, ಕಡಲ ತೀರಗಳು, ಜಲಪಾತಗಳೂ ಸೇರಿದಂತೆ ನಿಸರ್ಗ ಹಾಗೂ ಪ್ರಕೃತಿಯ ಸಿರಿ ಸೊಬಗು ಹಾಗೂ ಪರಿಸರದ ವಿಸ್ಮಯಗಳು ಕೇಶವ ವಿಟ್ಲ ಅವರ FACETS OF KARNATAKA: A PICTORIAL JOURNEY ಪುಸ್ತಕದಲ್ಲಿನ ವಿಶೇಷತೆಗಳಾಗಿವೆ. ಈ ಪುಸ್ತಕವನ್ನು ಅವಲೋಕಿಸಿದರೆ ರವಿ ಕಾಣದ್ದನ್ನು ಕವಿ ಕಂಡ ಎಂಬ ನಾಣ್ಣುಡಿ ನೆನಪಾಗುತ್ತದೆ. ಅಷ್ಟೇ ಅಲ್ಲ ! ಕೇಶವ ವಿಟ್ಲ ಅವರು ವರ್ಣ ಪಾರದರ್ಶಿಕೆಗಳನ್ನು ( COLOUR TRANSPERENCIES ) ಸೆರೆಹಿಡಿಯುವಲ್ಲಿ ಸಿದ್ಧಹಸ್ತರು ಎಂಬುದು ಸಾಬೀತಾಗುತ್ತದೆ. ಕೇಶವ ವಿಟ್ಲ ಅವರು ಈ ಪುಸ್ತಕಕ್ಕೆ ಸರಕು ಸಿದ್ದಪಡಿಸಲು ಎಂಟು ವರ್ಷಗಳ ಕಾಲ ಶ್ರಮಿಸಿದ್ದಾರೆ ಎಂಬುದು ಪ್ರಾಕೃತಿಕ ಸಂಪತ್ತಿನ ಬಗ್ಗೆ ಅವರಲ್ಲಿನ ಕಳಕಳಿ ಹಾಗೂ ಕಾಳಜಿಗೆ ಧ್ಯೋತಕವಾಗಿದೆ.

ಈ ಪುಸ್ತಕವನ್ನು ಹೊರತಂದು ಒಂದು ಬೃಹತ್ ಸಂಸ್ಥೆ ಮಾಡಲಾಗದ ಕೆಲಸವನ್ನು ಕೇಶವ ವಿಟ್ಲ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಮಾಡಿದ್ದಾರೆ ಎಂಬುದು ಕೇಶವ ವಿಟ್ಲ ಅವರ ಕೀರ್ತಿಗೆ ಮತ್ತೊಂದು ಗರಿ ಮೂಡಿಸುತ್ತದೆ.

ಕೇಶವ ವಿಟ್ಲ ಅವರಲ್ಲಿ Nose for News ಎಂಬಂತೆ Eyes for Photography ಇತ್ತು ಕೇಶವ ವಿಟ್ಲ ಅವರ ಈ ಪುಸ್ತಕವನ್ನು ಒಮ್ಮೆ ಅವಲೋಕಿಸಿದರೆ, ಯಾವುದೇ ಶ್ರಮವಿಲ್ಲದೆ ಕರ್ನಾಟಕದ ಪ್ರೇಕ್ಷಣೀಯ ತಾಣಗಳನ್ನು ಒಂದು ಸುತ್ತು ಹಾಕಿಕೊಂಡು ಬಂದ ಅನುಭವವಾಗುತ್ತದೆ. ಅಷ್ಟೇ ಅಲ್ಲ ! ಈ ಎಲ್ಲಾ ತಾಣಗಳನ್ನು ಜೀವನಲ್ಲಿ ಒಮ್ಮೆಯಾದರೂ ನೋಡಬೇಕೆನಿಸುತ್ತದೆ. ಜೊತೆಗೆ, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085